Sunday, September 23, 2012

ಯಾತಕೆ ಈ ಹೆಣ್ಣಿನ ಜನ್ಮ.. ?


ಯಾತಕೆ ಈ ಹೆಣ್ಣಿನ ಜನ್ಮ.. ?
ದೇವರೇ.. ನನಗ್ಯಾತಕೆ ಈ ಹೆಣ್ಣಿನ ಜನ್ಮ..
ನಿಜ.. ನನಗಂತೂ ಸಾಕಾಗಿ ಹೋಯ್ತು.. ಬರಿ 
ನೋವೆ ಇರುವ, ಹಾಳಾದ ಈ ಹೆಣ್ಣಿನ ಜನ್ಮ..!!

ಬರಿ ಮಗಳೆಂಬ ಕಾರಣಕ್ಕೆ, 
ಅಪ್ಪನ ಪ್ರೀತಿಯು ಸಿಗಲಿಲ್ಲ. 
ಅಮ್ಮನ ಕರುಣೆಯ ಪ್ರೀತಿ, 
ಬಹಳ ದಿನ ಉಳಿಯಲಿಲ್ಲ.. 
ಬರಿ ನೋವುಗಳ ನಡುವೆ, ನಾ
ರಾಜಕುಮಾರಿಯಾಗುವ ಕನಸೂ ಬೀಳಲಿಲ್ಲ. 
ಅದೆಷ್ಟೇ ಸುಧಾರಿಸಿಕೊಂಡರೂ,
ನನ್ನ ಈ ಕಷ್ಟಗಳು ತಪ್ಪಲಿಲ್ಲ. 

ಬಡವರ ಹುಡುಗಿ, ಬಲು ಚೆಲುವೆಯಂತೆ, 
ಈ ಅಂದ ಕಣ್ಣು ಕುಕ್ಕಿದ್ದು ನನ್ನ ತಪ್ಪಲ್ಲ. 
ನಾ ಕಂಡೆ ಪೋಲಿ ಹುಡುಗರಿಗೆ ಅಪ್ಸರೆಯಂತೆ,
ಈ ನೋವುಗಳ ನಡುವೆ, ಹೊಸ ಕಾಟ ಶುರುವಾಯಿತಲ್ಲ. 
ಅಮ್ಮಾ.. ನೀನಾದರೂ ಬದುಕಿರಬಾರದಿತ್ತೆ.., 
ಎಷ್ಟಾದರೂ.. ನಾ ಅಪ್ಪನ ಮುದ್ದಿನ ಮಗನಲ್ಲ. 
ಅದ್ಯಾರೋ ನನ್ನ ಇಷ್ಟ ಪಟ್ಟರಂತೆ,
ಕೊನೆಗೂ, ಆ ಕುಡುಕನ ಜೊತೆ ಮದ್ವೆ ಮುಗೀತಲ್ಲ. 

ಮೊದಮೊದಲು ರಸನಿಮಿಷಗಳ ರಸದಾಟ, 
ಮನಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತಲ್ಲ. 
ಬಣ್ಣ ಬದಲಾದಂತೆ, ಹೆಚ್ಚಾಯ್ತು ಗಂಡನ ರಂಪಾಟ,
ಮತ್ತೆ ನೆಮ್ಮದಿ, ಸೂತ್ರ ಹರಿದ ಪಟದಂತೆ ಹಾರಿತ್ತಲ್ಲ. 
ಪರರಿಗೆ ಒಳಗೊಳಗೇ ಖುಷಿ, ಕಂಡು ನಮ್ಮ ಕಿತ್ತಾಟ. 
ಕಣ್ಣೊರೆಸುವ ನೆಪದಲ್ಲಿ, ಕೆನ್ನೆ ತಾಕಿ ಸುಖಪಡುವ ಕೈಗಳೇ ಎಲ್ಲಾ..

ದಿನ ಉರುಳಿದಂತೆ, ಮೊಗ್ಗು ಹೂವಾಗಿ ಅರಳಿ, 
ಹಾಲನಗೆ ನಗುವ, ಕಂದನು ಹುಟ್ತಿದನಲ್ಲ..
ಮೊಲೆಹಾಲ ಕುಡಿದು, ಅಂಗಳದಿ ಆಡುತ್ತಾ.. 
ಹುಣ್ಣಿಮೆ ಚಂದಿರನಂತೆ ಬೆಳೆದು ದೊಡ್ದವನಾದನಲ್ಲ. 
ಕಾಲ ಸರಿದದ್ದು ಹೇಗೋ ಕಾಣೆ, ನಂಗೆ ಮುಪ್ಪಾಯ್ತು,
ಅವನಾಗಿದ್ದಾನೆ ಈಗ ಚೆಂದುಳ್ಳಿ ಚೆಲುವೆಗೆ ನಲ್ಲ. 

ಅಪ್ಪ-ಗಂಡ-ಮಗನೋಟ್ಟಿಗಿದ್ದು, 
ನಾ ಪಟ್ಟ ಸುಖ ಆರಕ್ಕೆರಲಿಲ್ಲ.. 
ಬಯಸದೆ ಬಂದ ಕಷ್ಟಗಳಿಗೆ, 
ಸುಮ್ಮನೆ ಸೊರಗಿದ್ದು, ಉಪಯೋಗವಾಗಲಿಲ್ಲ. 
ಯಾತಕೆ ಈ ಹೆಣ್ಣಿನ ಜನ್ಮ. 
ನಾ ಸಾಧಿಸಿದ್ದು ಶೂನ್ಯವೇ ಎಲ್ಲಾ..!!! 

ಜನುಮ ಜನುಮದ ಅನುಬಂಧ


ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

ಸುಖದ ಕನಸು ಮರೆತೇ ಹೋಗಿ,
ನನ್ನಾ ಜೀವ ಸೊರಗಿ.. ಸೊರಗಿ.. 
ಈ ಜೀವನದಲ್ಲಿ ನಾನು ಬೆಂದು ಹೋದೆ. 
ನಾನ್ಯಾವ ಪಾಪ ಮಾಡಿದೆ. 
ಓ ಗಣಪಾ.. ಹಸಿವ ನೀಗಿಸು ಬಾ .. ಬಾ.. 
ಹಸಿವ ನೀಗಿಸು.. 

ನನ್ನನು ನೋಡಿ ನೀ ನಗುತಿರುವೆ, 
ನಿಜಕೂ ನಾನು ಬಲು ಹಸಿದಿರುವೆ,
ನನ್ನಲಿ ನಿನಗೆ ಕರುಣೆ ಇಲ್ಲವೇನು.. 
ನಾ ಬದುಕೋ ಆಸೆ ನನಗಿನ್ನು..
ಓ ಗಣಪಾ.. ಹಸಿವ ನೀಗಿಸು ಬಾ.. ಬಾ...
ಹಸಿವ ನೀಗಿಸು.. 

ಈ ಹಾದಿಯಲ್ಲಿ ನಾನು ಓಡಿ ಬಂದೆ,
ನಿನ್ನಲ್ಲಿ ಅನ್ನವನ್ನು ಬೇಡಲೆಂದೇ .. ಓ ಗಣಪಾ...
ಓ ಗಣಪಾ... ತುತ್ತನು ನೀಡಲು ಬಾ.. ಬಾ.. 

[ " ಜನುಮ ಜನುಮದ ಅನುಬಂಧ " ಚಿತ್ರದ " ತಂಗಾಳಿಯಲಿ ನಾನು ತೇಲಿ ಬಂದೆ " ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

Tuesday, September 18, 2012

ನಿನ್ನೆದೆಯಲಿ ಧೈರ್ಯವೇ ತುಂಬಲಿ.



ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಪ್ರಯತ್ನಾ ಮಾಡಿಯೂ ಸೋತರೆ ಸಾಲದು,
ಮತ್ತೆ ಮತ್ತೆ ಗೆಲ್ಲುವ ಕನಸು ಕಾಣಬೇಕಿಲ್ಲಿ.
ಸೋಲಿಗೂ, ಗೆಲುವಿಗೂ ಅಂತರ ಸಣ್ಣದು,
ಪಡೆದಂತ ತಾಳ್ಮೆ ದಾರಿದೀಪ, ಸೋಲಿನ ಅನುಭವ. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನೀನೊಮ್ಮೆ ಕೇಳು ನನ್ನ ಮಾತನ್ನ.

ಸೋತರೆ ನೋವಿದೆ; ಗೆದ್ದರೆ ನಲಿವಿದೆ
ಸೋತು ಗೆದ್ದರೆ, ಆ ಗೆಲುವು ದೊಡ್ಡದೇ. 
ನೋವಿನ ದಾರೀಲಿ ಬಳಲಿದ ಜೀವಕೆ
ನಿನ್ನ ಹರಸುವ ಮನಸೇ ದೈವವು. 

ಅಮ್ಮನಾ ಕಂಗಳು ಕಂಬನಿ ಸುರಿಸುತ,
ತಾಯ ವರವಾಗಿ ಮೌನದಲ್ಲೇ, ನಮ್ಮನು ಹರಸುತ. 
ಸೋಲನು ಬಯಸದೆ ಮಾಡಿದ ಯತ್ನವು,
ಮೊದಲ ಗೆಲುವಿನ ಸಾರ್ಥಕತೆಯ ಸಂತಸ ತರುವುದು. 

ನಿನ್ನೆದೆಯಲಿ ಧೈರ್ಯವೇ ತುಂಬಲಿ.. 
ಮನದಾ ಅಳುಕು ದೂರವಾಗಲಿ..
ನನ್ನಾಣೆ ಮತ್ತೆ ನೀನು ಸೋಲಲ್ಲ... 
ನನ್ನಾಣೆ ಮತ್ತೆ ನೀನು ಸೋಲಲ್ಲ... 

[ "ಮುಸ್ಸಂಜೆ ಮಾತು" ಚಿತ್ರದ "ಏನಾಗಲಿ ಮುಂದೆ ಸಾಗು ನೀ" ಎಂಬ ಹಾಡಿಗೆ 
ಕಸ್ತೂರಿ ವಾಹಿನಿಯ "ಹೃದಯ ಗೀತೆ ಬರೆದೆ ನೀನು" ಎಂಬ ಕಾರ್ಯಕ್ರಮದಲ್ಲಿ 
ನಾನು ಬರೆದ ಹೊಸ ಸಾಹಿತ್ಯ..]

Friday, September 14, 2012

ನೀನು ..



ಬಾನಲ್ಲಿ ಕೆಂಪಾದ ಸೂರ್ಯನ ಕಾಂತಿ ನೀನು,
ಭುವಿಯಲ್ಲಿ ಕಂಗೊಳಿಸುವ ಹಸಿರಿನ ಸಿರಿ ನೀನು,
ಹಗಲಲ್ಲಿ ನಗುವ ಸುಮದ ಪರಿಮಳ ನೀನು,
ಇರುಳಲ್ಲಿ ಹೊಳೆವ ಚಂದ್ರಮನ ಬೆಳಕು ನೀನು.

ಕನಸಲ್ಲಿ  ನನ್ನ ಸೆಳೆದ ಕಾವ್ಯಕನ್ನಿಕೆ ನೀನು,
ಮನದಲ್ಲಿ ಸದಾ ನಗುವ ಬೇಲೂರ ಶಿಲಾಬಾಲಿಕೆ ನೀನು,
ಕಣ್ಣಲ್ಲಿ ಕ್ಷಣಮಾತ್ರದಿ ಸೆಳೆದೆ ನನ್ನನು ನೀನು,
ನನ್ನಲ್ಲಿ ನಿನಗೆ ಮುತ್ತಿಡುವಾಸೆ ಹೆಚ್ಚಾಗಿದೆ ಇನ್ನು.

ನಿನ್ನಲ್ಲಿ ನನ್ನ ಸೇರುವಾಸೆ ಮೂಡುತ್ತಿಲ್ಲವೇನು,
ನಾನಿಲ್ಲಿ ನಿನ್ನ ಬರುವಿಕೆಗಾಗಿ ಕಾದಿರುವೆನು ಇನ್ನು,
ಕನಸಲ್ಲಿ ನಮ್ಮ ಪ್ರಣಯಗೀತೆ ಹಾಡುತಿಹೆ ಇನ್ನು,
ನನಸಲ್ಲಿ ಒಮ್ಮೆ ನಿಜವಾಗಿಸು ಚೆಲುವೆ ನೀನಿನ್ನು..